No products in the cart.
ಏಪ್ರಿಲ್ 21 – ಅರಣ್ಯ ಮಧ್ಯದಲ್ಲಿ ಮಾರ್ಗ!
” ಇಗೋ, ಹೊಸ ಕಾರ್ಯವನ್ನು ಮಾಡುವೆನು, … ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು,” (ಯೆಶಾ ೪೩:೧೯)
ನಿಮ್ಮ ಹೃದಯದಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಬಹುದು: “ನನಗಾಗಿ ಎಂದಾದರೂ ಒಂದು ದಾರಿ ತೆರೆಯುವುದೇ? ಒಂದು ಮಾರ್ಗ ಕಾಣಿಸಿಕೊಳ್ಳುವುದೇ? ನನ್ನ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸುವುದೇ? ಕರ್ತನು ನನ್ನನ್ನು ಮೇಲಕ್ಕೆತ್ತಿ ನನ್ನ ಕುಟುಂಬವನ್ನು ಆಶೀರ್ವದಿಸುವನೋ?”
ಆದರೆ ಕರ್ತನ ವಾಗ್ದಾನವೇನು? “ನಾನು ಅಡವಿಯಲ್ಲಿ ದಾರಿಯನ್ನೂ ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುವೆನು.”
ಜನರು ಅನೇಕ ಮಾರ್ಗಗಳನ್ನು ಮುಚ್ಚಬಹುದು. ನಿಮಗಾಗಿ ಬಾಗಿಲುಗಳು ಮುಚ್ಚಿಹೋಗಬಹುದು. ಯೆರಿಕೋ ಪಟ್ಟಣದ ಬಲವಾದ ಕೋಟೆ ಬಾಗಿಲುಗಳಂತೆ, ಕಂಚಿನ ಬಾಗಿಲುಗಳು ಮತ್ತು ಕಬ್ಬಿಣದ ಅಗುಳಿಗಳು ನಿಮ್ಮ ಮುಂದೆ ಸವಾಲಾಗಿ ನಿಂತಿರಬಹುದು. ಅಂತಹ ಸಮಯದಲ್ಲಿ, ಕರ್ತನನ್ನು ದೃಷ್ಟಿಸಿ ನೋಡಿರಿ. ಎಲ್ಲಿ ದಾರಿಯೇ ಇಲ್ಲ ಎಂದು ನೀವು ಭಾವಿಸಿದ್ದೀರೋ, ಅಲ್ಲಿ ಆತನು ನಿಮಗಾಗಿ ಮಾರ್ಗವನ್ನು ತೆರೆಯುವನು.
ಇಸ್ರಾಯೇಲ್ ಜನರು ಐಗುಪ್ತದಿಂದ ಹೊರಬಂದಾಗ, ಅವರು ಕೆಂಪು ಸಮುದ್ರದ ದಡವನ್ನು ತಲುಪಿ ಮುಂದೆ ಹೋಗಲಾರದೆ ಅಸಹಾಯಕರಾಗಿ ನಿಂತರು. ಅವರ ಮುಂದೆ ಸಮುದ್ರವಿತ್ತು. ಅವರ ಹಿಂದೆ ಐಗುಪ್ತದ ಸೈನ್ಯವು ಬೆನ್ನಟ್ಟಿ ಬರುತ್ತಿತ್ತು. ಎರಡೂ ಬದಿಗಳಲ್ಲಿ ದೊಡ್ಡ ಪರ್ವತಗಳಿದ್ದವು. ಐಗುಪ್ತರ ಕತ್ತಿಗೆ ಬಲಿಯಾಗುತ್ತೇವೋ ಅಥವಾ ಕೆಂಪು ಸಮುದ್ರದಲ್ಲಿ ಮುಳುಗಿ ಸಾಯುತ್ತೇವೋ ಎಂದು ಅವರಿಗೆ ತಿಳಿಯದಾಯಿತು.
ಆಗ ಕರ್ತನು ಮೋಶೆಗೆ, “ನಿನ್ನ ಕೋಲನ್ನು ಕೆಂಪು ಸಮುದ್ರದ ಮೇಲೆ ಚಾಚು” ಎಂದು ಹೇಳಿದನು. ಅವನು ಅದನ್ನು ಚಾಚಿದಾಗ, ಸಮುದ್ರವು ಇಬ್ಬಾಗವಾಯಿತು ಮತ್ತು ಒಂದು ದಾರಿ ಕಾಣಿಸಿಕೊಂಡಿತು.
ನಂತರ, ಇಸ್ರಾಯೇಲ್ಯರು ಯೊರ್ದನ್ ನದಿಯ ದಡಕ್ಕೆ ಬಂದಾಗ, ಅದರ ಉಕ್ಕಿ ಹರಿಯುವ ನೀರನ್ನು ಕಂಡು ಹೆದರಿದರು. ಸುಗ್ಗಿ ಕಾಲದಲ್ಲಿ ಯೊರ್ದನ್ ನದಿಯು ದಡ ಮೀರಿ ಹರಿಯುತ್ತದೆ. ಅಂತಹ ನದಿಯನ್ನು ದಾಟುವುದು ಹೇಗೆ? ಆದರೆ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿಯಲ್ಲಿ ಕಾಲಿಟ್ಟ ಕೂಡಲೇ, ನೀರು ಎರಡಾಗಿ ದಾರಿ ಉಂಟಾಯಿತು.
ಕರ್ತನು ನಿಮಗಾಗಿ ಒಂದು ಮಾರ್ಗವನ್ನು ತೆರೆಯಲು ನಿರ್ಧರಿಸಿದಾಗ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಂಚಿನ ಬಾಗಿಲುಗಳನ್ನು ಮುರಿದು, ಕಬ್ಬಿಣದ ಅಗುಳಿಗಳನ್ನು ಕತ್ತರಿಸುವವನು ಆತನೇ. ಆತನು ಅಡೆತಡೆಗಳನ್ನು ನಿವಾರಿಸಿ ನಮಗಿಂತ ಮುಂಚಿತವಾಗಿ ಹೋಗುತ್ತಾನೆ (ಮಿಕಾ 2:13). ಯಾರೂ ಮುಚ್ಚಲಾಗದ ಬಾಗಿಲುಗಳನ್ನು ಆತನು ತೆರೆಯುತ್ತಾನೆ.
ಶದ್ರಕ್, ಮೇಷಕ್ ಮತ್ತು ಅಬೇದ್ನಗೋ ಅವರನ್ನು ಉರಿಯುವ ಆಗ್ನಿಕುಂಡಕ್ಕೆ ಹಾಕಲಾಯಿತು. ಅಲ್ಲಿಯೂ ಕರ್ತನು ಮಾರ್ಗವನ್ನು ಮಾಡಬಲ್ಲನೇ? ಹೌದು! ಆ ಭೀಕರ ಬೆಂಕಿಯ ಮಧ್ಯದಲ್ಲಿ, ಕರ್ತನೇ ಇಳಿದು ಬಂದು ಅವರೊಂದಿಗೆ ನಡೆದು, ಅವರಿಗೊಂದು ದಾರಿಯನ್ನು ಮಾಡಿಕೊಟ್ಟನು. ಅವರು ಆ ಆಗ್ನಿಕುಂಡದಲ್ಲಿ ಸಂತೋಷದಿಂದ ಓಡಾಡಿದರು. ಕರ್ತನು ಆ ಬೆಂಕಿಯ ಶಕ್ತಿಯನ್ನು ಆರಿಸಿದನು ಮತ್ತು ಅರಸನ ಹೃದಯದೊಂದಿಗೆ ಮಾತನಾಡಿ, ಅವರಿಗೆ ಗೌರವದ ಸ್ಥಾನವನ್ನು ದೊರಕಿಸಿಕೊಟ್ಟನು.
ಪ್ರಿಯ ದೇವರ ಮಕ್ಕಳೇ, ನಮ್ಮ ಕರ್ತನು ಅಡವಿಯಲ್ಲಿ ದಾರಿಗಳನ್ನು ಮತ್ತು ಮರುಭೂಮಿಯಲ್ಲಿ ನದಿಗಳನ್ನು ಉಂಟುಮಾಡುವವನು. ಆತನು ನಿಮ್ಮ ಜೀವನವನ್ನೂ ಸಮೃದ್ಧಿಗೊಳಿಸುವನು. ಇಗೋ, ನಿಮ್ಮ ಮುಂದೆ ಒಂದು ಹೊಸ ದಾರಿ ಕಾಣಿಸಿಕೊಳ್ಳುತ್ತಿದೆ. ಕರ್ತನು ಒಂದು ಹೊಸ ಬಾಗಿಲನ್ನು ತೆರೆಯುತ್ತಿದ್ದಾನೆ—ಅದನ್ನು ಯಾರೂ ಮುಚ್ಚಲು ಸಾಧ್ಯವಿಲ್ಲ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣ ನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು; ನರಿಗಳು ಮಲಗುತ್ತಿದ್ದ ಹಕ್ಕೆಯು ಅಪುಜಂಬುಗಳ ಪ್ರದೇಶವಾಗುವದು.” (ಯೆಶಾ ೩೫:೬-೭)
