No products in the cart.
ಜನವರಿ 15 – ನಿಮ್ಮ ಹೃದಯ ಪ್ರಜ್ವಲಿಸಲಿ!
“ನನ್ನ ಹೃದಯದಲ್ಲಿ ಸಂತಾಪ ಉಕ್ಕಿತು; ನಾನು ಯೋಚಿಸುತ್ತಿರುವಲ್ಲಿ ಬೆಂಕಿಯುರಿತು. ಆಗ ನಾನು ಬಾಯಿ ಬಿಟ್ಟು” (ಕೀರ್ತ ೩೯:೩).
ದೇವರ ವಾಕ್ಯದ ಧ್ಯಾನವು ನಮ್ಮ ಹೃದಯದಲ್ಲಿ ಪರಿಶುದ್ದವಾದ ಬೆಂಕಿಯ ಕಿಡಿಯನ್ನು ಹುಟ್ಟಿಸುತ್ತದೆ. ಇಸಾಕನು ಒಬ್ಬ ಧ್ಯಾನಿಸುವ ವ್ಯಕ್ತಿಯಾಗಿದ್ದನು. ಸಂಜೆಯ ತಂಗಾಳಿಯಲ್ಲಿ ಆತನು ತನ್ನನ್ನು ಪ್ರತ್ಯೇಕಿಸಿಕೊಂಡು ಕರ್ತನನ್ನು ಆತನ ವಾಗ್ದಾನಗಳನ್ನು ಧ್ಯಾನಿಸುತ್ತಿದ್ದನು. ಆತನ ನಂತರ ದಾವೀದನು ಒಬ್ಬ ಶ್ರೇಷ್ಟವಾದ ಧ್ಯಾನ ಮಾಡುವ ದೇವಮನುಷ್ಯನಾಗಿದ್ದನು. ಆತನು ಹೀಗೆ ಬರೆದಿದ್ದಾನೆ ” ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು”. (ಕೀರ್ತ ೧:೨).
ಎಲ್ಲಾ ವಿಧವಾದ ಧ್ಯಾನಗಳಲ್ಲಿ ಶ್ರೇಷ್ಟವಾದ ಧ್ಯಾನವೇನಂದರೆ ಶಿಲುಬೆಯ ಕುರಿತಾದ ಧ್ಯಾನವಾಗಿದೆ. ಶಿಲುಬೆಯ ಮೇಲೆ ನೇತು ಹಾಕಲ್ಪಟ್ಟ ಕ್ರಿಸ್ತನ ಕುರಿತಾಗಿ ಅಧಿಕವಾಗಿ ಧ್ಯಾನ ಮಾಡುವಾಗ ನಮ್ಮ ಹೃದಯದಲ್ಲಿ ಬೆಳಕಿನ ಕಿಡಿ ಉರಿಯಲು ಪ್ರಾರಂಭಿಸುತ್ತದೆ. ದೇವರ ಪ್ರೀತಿಯು ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ದೇವರಿಂದ ಬಲವಾಗಿ ಉಪಯೋಗಿಸಲ್ಪಟ್ಟ ಒಬ್ಬ ದೇವರ ಸೇವಕರು ಒಮ್ಮೆ ಹೀಗೆ ಹೇಳಿದರು ” ನಾನು ದೇವರ ಮುಂದೆ ಮೊಣಕಾಲೂರಿ ಕುಳಿತುಕೊಳ್ಳುವಾಗ ಕೆಲವೊಮ್ಮೆ ಮೂರು ನಾಲ್ಕು ದಿನಗಳು ಪ್ರಾರ್ಥನೆಯಲ್ಲಿಯೇ ಸಮಯವನ್ನು ಕಳೆಯುತ್ತಿದ್ದೆನು, ಪ್ರತಿ ಸಾರಿ ಮೊಣಕಾಲೂರುವಾಗ ನಾನು ಕ್ರಿಸ್ತನ ಮುಳ್ಳಿನ ಕಿರೀಟವನ್ನು ಕಾಣುತ್ತಿದ್ದೆ. ನಾನು ಆತನ ಮೈಮೇಲಿದ್ದ ಪ್ರತಿಯೊಂದು ಗಾಯವನ್ನು ಲೆಕ್ಕಿಸಿ ಈ ಗಾಯ ನನಗಾಗಿ, ಈ ಕಣ್ಣೀರು ನನಗಾಗಿ ಸುರಿಸಲ್ಪಟ್ಟಿದೆ ಎಂದು ಪ್ರಾರ್ಥಿಸುತ್ತಿದ್ದೆ ಮತ್ತು ದೇವರ ಪ್ರೀತಿಯು ನನ್ನ ಹೃದಯದಲ್ಲಿ ಬೆಂಕಿಯ ಹಾಗೆ ಪ್ರಜ್ವಲಿಸುತ್ತಿತ್ತು. ಕೃಪೆಯ ಆತ್ಮನು ನನ್ನ ಮೇಲೆ ಸುರಿಸಲ್ಪಟ್ಟಿದೆ. ಆತ್ಮನಿಂದ ನಾನು ಹೆಚ್ಚು ತಾಸುಗಳು ಪ್ರಾರ್ಥನೆ ಮಾಡಲು ಹೊಸ ಬಲವನ್ನು ಪಡೆದುಕೊಳ್ಳುತ್ತೇನೆ.
ಪ್ರಿಯ ದೇವರ ಮಕ್ಕಳೇ, ನಿಮ್ಮ ಆಲೋಚನೆಗಳನ್ನು ಶಿಲುಬೆಯ ಮೇಲೆ ಕೇಂದ್ರೀಕರಿಸಿರಿ. ನಮ್ಮ ಪ್ರತಿಯೊಂದು ಪಾಪದ ಅಲೋಚನೆಗಳನ್ನು ಶುದ್ಧೀಕರಿಸುವ ಯೇಸುಕ್ರಿಸ್ತನ ರಕ್ತದ ಕುರಿತು ಧ್ಯಾನಿಸಿರಿ. ಆತನ ನಾಮಗಳನ್ನು, ಸ್ವಭಾವಗಳನ್ನು, ದೈವೀಕ ಸಾರೂಪ್ಯವನ್ನು ಧ್ಯಾನಿಸಿರಿ. ಕರ್ತನು ನಿನಗಾಗಿ ಮಾಡಿರುವ ಸಕಲ ವಿಧವಾದ ಅದ್ಭುತ ಕಾರ್ಯಗಳ ಕುರಿತು ಧ್ಯಾನಿಸಿರಿ. ಆತನ ಎಲ್ಲಾ ಶಕ್ತಿಯುಳ್ಳ ವಾಕ್ಯಗಳು ಮತ್ತು ವಾಗ್ದಾನಗಳನ್ನು ಧ್ಯಾನಿಸಿರಿ.
ದಾವೀದನು ಹೇಳುವ ಹಾಗೆ “ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ; ನಾನಾದರೋ ಯೆಹೋವನಲ್ಲಿ ಆನಂದಿಸುವೆನು” (ಕೀರ್ತ ೧೦೪:೩೪). ಹೌದು ದೇವರ ಕುರಿತು ಧ್ಯಾನಿಸುವುದು ಒಂದು ಅನುಪಮ ಸಿಹಿತನದಿಂದ ಕೂಡಿದೆ. ನೀವು ಆತನ ಒಳ್ಳೆತನ ಮತ್ತು ನಿಮ್ಮನ್ನು ದಿನಾಲು ನಡೆಸಿದ ಹಾದಿಯನ್ನು ಧ್ಯಾನಿಸುವಾಗ ನಿಮ್ಮ ಹೃದಯದಲ್ಲಿ ಸಂತೋಷ ಉಕ್ಕಿ ಹರಿಯುವುದು. ನೀವು ಧ್ಯಾನಿಸುವುದನ್ನು ಮುಂದುವರೆಸುವಾಗ ಪರಲೋಕದ ಬೆಂಕಿಯು ನಿಮ್ಮ ಮೇಲೆ ಇಳಿದು ಬರುವುದು. ಆಗ ನೀವು ಲೀಲ ಜಾಲವಾಗಿ ದೇವರನ್ನು ಆರಾಧಿಸಬಹುದು. ನೀವು ಆತ್ಮನಿಂದ ನಡೆಸಲ್ಪಟ್ಟವರಾಗಿ ಆತ್ಮನಿಂದಲೂ ಸತ್ಯದಿಂದಲೂ ದೇವರನ್ನು ಘನಪಡಿಸುವಿರಿ.
ದೇವರನ್ನು ಸ್ತುತಿಸಲು ಎಲ್ಲಾ ಸಮಯವೂ ಸೂಕ್ತವಾಗಿದೆ. ಆದರೆ ದಿನದಲ್ಲಿ ಕೆಲವು ತಾಸುಗಳು ತುಂಬಾ ಅಮೂಲ್ಯವಾಗಿರುತ್ತದೆ. ಮುಂಜಾನೆಯ ಮೊದಲನೆಯ ತಾಸು ದೇವರಿಗೆ ಧ್ಯಾನದ ಮೂಲಕ ಪ್ರಥಮ ಸ್ಥಾನ ಕೊಡುವುದಕ್ಕೆ ಸೂಕ್ತವಾದ ಸಮಯವಾಗಿರುತ್ತದೆ. ಮಧ್ಯಾಹ್ನದ ಸಮಯ, ಕೆಲಸದ ನಡುವೆ ದೇವರಿಗೆ ಘನತೆಯನ್ನು ತರಲು ಹಾಗೂ ಧ್ಯಾನ ಮಾಡಲು ಅಮೂಲ್ಯವಾದ ಸಮಯವಾಗಿದೆ. ಸಂಜೆಯ ಜಾವದಲ್ಲಿ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಕರ್ತನ ಪ್ರೀತಿಯನ್ನು ಧ್ಯಾನಿಸುವುದು ಉತ್ತಮ ಆಯ್ಕೆಯಾಗಿರುತ್ತದೆ. ರಾತ್ರಿಯ ಸಮಯದಲ್ಲಿ ಧ್ಯಾನಿಸುವುದು ಆಶೀರ್ವಾದವನ್ನು ನೀಡುತ್ತದೆ.
ನಿಮ್ಮ ಹೃದಯವನ್ನು ಧ್ಯಾನಕ್ಕಾಗಿ ಒಪ್ಪಿಸಿಕೊಡಿರಿ, ದೇವರು ನಿಮ್ಮನ್ನು ತನ್ನ ಪರಿಶುದ್ಧ ಬೆಂಕಿಯಿಂದ ತುಂಬಿಸುವನು.
ಮುಂದಿನ ಆಧ್ಯಾಯನಕ್ಕಾಗಿ ಓದುವ ದೇವರವಾಕ್ಯ:
“ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು” (ಕೀರ್ತ ೬೩:೬)